19
ಇಸ್ರೇಲಿನ ಪ್ರಭುಗಳ ಕುರಿತು ಶೋಕಗೀತೆ
ದೇವರು ನನಗೆ, “ಇಸ್ರೇಲರ ಅಧಿಪತಿಗಳ ವಿಷಯವಾದ ಈ ಶೋಕಗೀತೆಯನ್ನು ನೀನು ಹಾಡಬೇಕು” ಎಂದು ಹೇಳಿದನು:
 
“ ‘ನಿನ್ನ ತಾಯಿಯು ಏನಾಗಿದ್ದಳು?
ಆಕೆಯು ಸಿಂಹಗಳ ಮಧ್ಯದಲ್ಲಿ ಸಿಂಹಿಣಿಯಾಗಿದ್ದಳು.
ಆಕೆಯು ಪ್ರಾಯದ ಸಿಂಹಗಳೊಡನೆ
ಮಲಗಿ ತನ್ನ ಮರಿಗಳನ್ನು ಸಾಕಿದಳು.
ಮರಿಗಳಲ್ಲೊಂದು ಎದ್ದು
ಗಟ್ಟಿಮುಟ್ಟಾದ ಸಿಂಹವಾಗಿ ಬೆಳೆಯುತ್ತಾ ಬಂತು.
ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ
ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.
 
“ ‘ಅದು ಗರ್ಜಿಸುವ ಶಬ್ದವನ್ನು ಜನರು ಕೇಳಿದರು.
ಜನಾಂಗಗಳು ಅದರ ಬಗ್ಗೆ ಕೇಳಿದರು.
ಅದನ್ನು ತಮ್ಮ ಗುಂಡಿಯಲ್ಲಿ ಅವರು ಬಂಧಿಸಿದರು.
ಅವರು ಅದರ ಬಾಯಿಗೆ ಕೊಂಡಿಯನ್ನು ಹಾಕಿ ಈಜಿಪ್ಟಿಗೆ ಅದನ್ನು ಕೊಂಡೊಯ್ದರು.
 
“ ‘ಆ ಸಿಂಹಿಣಿಯು ತನಗಾದ ನಿರಾಶೆಯನ್ನೂ
ತನ್ನ ಮರಿಸಿಂಹದ ಮೇಲೆ ತನಗಿದ್ದ ನಿರೀಕ್ಷೆ ಹಾಳಾದದ್ದನ್ನು ಕಂಡು,
ತನ್ನ ಮರಿಗಳಲ್ಲಿ ಮತ್ತೊಂದನ್ನು ತೆಗೆದುಕೊಂಡು
ಅದನ್ನು ಪ್ರಾಯದ ಸಿಂಹವನ್ನಾಗಿ ಮಾಡಿತು.
ಅದು ಬೆಳೆದು ಪ್ರಾಯದ ಸಿಂಹವಾಗಿ
ಸಿಂಹಗಳೊಂದಿಗೆ ಬೇಟೆಯಾಡಲು ಹೋಯಿತು;
ತನ್ನ ಆಹಾರವನ್ನು ತಾನೇ ಬೇಟೆಯಾಡತೊಡಗಿ
ಮನುಷ್ಯರನ್ನು ಕೊಂದು ತಿನ್ನಲಾರಂಭಿಸಿತು.
ಅದು ಸ್ತ್ರೀಯರನ್ನು ವಿಧವೆಯರನ್ನಾಗಿ ಮಾಡಿತು; ಪಟ್ಟಣಗಳನ್ನು ನಿರ್ಜನವನ್ನಾಗಿ ಮಾಡಿತು;
ಅದು ಗರ್ಜಿಸಿದಾಗ ದೇಶವೂ ಅದರಲ್ಲಿರುವ ಪ್ರತಿಯೊಂದೂ ಭಯಗೊಂಡವು.
ಸುತ್ತಮುತ್ತಲಿನ ಜನಾಂಗಗಳವರು ಕೂಡಿಬಂದು ಅದರ ವಿರುದ್ಧವಾಗಿ ನಿಂತು,
ಬಲೆಹರಡಿ ಅದನ್ನು ಬಂಧಿಸಿದರು.
ಅವರು ಅದನ್ನು ಮರದ ಪಂಜರದಲ್ಲಿಟ್ಟು ಕೊಂಡಿಗಳನ್ನು ಹಾಕಿ,
ಬಾಬಿಲೋನಿನ ರಾಜನ ಬಳಿಗೆ ಕೊಂಡೊಯ್ದರು.
ಅದರ ಗರ್ಜನೆಯು ಇಸ್ರೇಲಿನ ಪರ್ವತಗಳ ಮೇಲೆ ಇನ್ನೆದಿಗೂ ಕೇಳದಿರಲಿ
ಎಂದು ಅದನ್ನು ಅಲ್ಲಿ ಸೆರೆಮನೆಗೆ ಹಾಕಿದರು.
 
10 “ ‘ನಿನ್ನ ತಾಯಿಯು ನೀರಾವರಿಯಲ್ಲಿ ನೆಟ್ಟ
ದ್ರಾಕ್ಷಾಲತೆಯಂತಿದ್ದಳು.
ಬೇಕಾದಷ್ಟು ನೀರು ಇದ್ದುದರಿಂದ
ಅದು ಫಲಭರಿತವಾಗಿದ್ದು ಅನೇಕ ಕೊಂಬೆಗಳನ್ನು ಹೊಂದಿತ್ತು.
11 ಅದು ಬಲವಾದ ಕಾಂಡಗಳನ್ನು ಬೆಳೆಸಿತು.
ಅದರ ಕಾಂಡಗಳು ಅಧಿಪತಿಗಳ ರಾಜದಂಡದಂತಿದ್ದವು.
ಅವುಗಳಲ್ಲಿ ಒಂದು ಮೋಡಗಳ ಮಧ್ಯದಲ್ಲಿ ಎತ್ತರವಾಗಿ ಬೆಳೆಯಿತು.
ಅದು ತನ್ನ ಎತ್ತರದಿಂದ ಮತ್ತು ತನ್ನ ಅನೇಕ ಕೊಂಬೆಗಳಿಂದ ಎದ್ದುಕಾಣುತ್ತಿತ್ತು.
12 ಆದರೆ ದ್ರಾಕ್ಷಾಲತೆಯು ಬೇರು ಸಮೇತ ಕಿತ್ತುಹಾಕಲ್ಪಟ್ಟಿತು.
ಅದು ನೆಲದ ಮೇಲೆ ಬಿಸಾಡಲ್ಪಟ್ಟಿತು.
ಪೂರ್ವದ ಬಿಸಿಗಾಳಿಯು ಅದರ ಹಣ್ಣುಗಳನ್ನು ಒಣಗಿಸಿತು.
ಅದರ ಬಲವಾದ ಕೊಂಬೆಗಳು ಮುರಿಯಲ್ಪಟ್ಟವು. ಅವುಗಳನ್ನು ಬೆಂಕಿಯು ಸುಟ್ಟುಹಾಕಿತು.
 
13 “ ‘ಈಗ ಆ ದ್ರಾಕ್ಷಾಬಳ್ಳಿಯನ್ನು ಮರುಭೂಮಿಯಲ್ಲಿ ನೆಡಲ್ಪಟ್ಟಿರುತ್ತದೆ.
ಅದು ನೀರಿಲ್ಲದ ಬಂಜರು ಭೂಮಿ.
14 ಅದರ ಸ್ವಂತ ಕಾಂಡದಿಂದಲೇ ಬೆಂಕಿಯು ಹೊರಟುಬಂದು
ಅದರ ಚಿಕ್ಕ ಕೊಂಬೆಗಳನ್ನು ಮತ್ತು ಫಲಗಳನ್ನು ನಾಶಮಾಡಿತು.
ಈಗ ಬಲವಾದ ಕಾಂಡ ಅದರಲ್ಲಿಲ್ಲ.
ಆಳುವದಕ್ಕೆ ರಾಜದಂಡವೂ ಅದರಲ್ಲಿಲ್ಲ.’
 
ಇದು ಮರಣದ ಶೋಕಗೀತೆ. ಇದನ್ನು ಶೋಕಗೀತೆಯನ್ನಾಗಿಯೇ ಬಳಸಲಾಗುತ್ತಿದೆ.”