33
ದುಷ್ಟತನವು ಹೆಚ್ಚಿನ ದುಷ್ಟತನಕ್ಕೆ ಕಾರಣ
ನೀವು ಯುದ್ಧಮಾಡಿ ಇತರರಿಂದ ಸುಲಿದುಕೊಳ್ಳುತ್ತೀರಿ. ಆದರೆ ಅವರು ನಿಮ್ಮಿಂದ ಏನೂ ಕದ್ದುಕೊಳ್ಳಲಿಲ್ಲ. ನೀವು ಜನರಿಗೆ ವಿರುದ್ಧವಾಗಿ ತಿರುಗುತ್ತೀರಿ. ಆದರೆ ಅವರು ನಿಮಗೆ ವಿರುದ್ಧವಾಗಲಿಲ್ಲ. ಆದ್ದರಿಂದ ನೀವು ಕದ್ದುಕೊಳ್ಳುವದನ್ನು ಬಿಟ್ಟಾಗ ಇತರರು ನಿಮ್ಮದನ್ನು ಕದ್ದುಕೊಳ್ಳುತ್ತಾರೆ. ನೀವು ಇತರರಿಗೆ ಹಾನಿ ಮಾಡುವದನ್ನು ನಿಲ್ಲಿಸಿದಾಗ ಇತರರು ನಿಮಗೆ ಹಾನಿ ಮಾಡುವರು. ಆಗ ನೀವು ಹೀಗೆ ಹೇಳುವಿರಿ:
 
“ಯೆಹೋವನೇ, ನಮಗೆ ದಯೆತೋರು.
ನಾವು ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಿದ್ದೇವೆ.
ಯೆಹೋವನೇ, ಪ್ರತಿಮುಂಜಾನೆ ನಮಗೆ ಶಕ್ತಿ ದಯಪಾಲಿಸು,
ಕಷ್ಟದಲ್ಲಿರುವಾಗ ನಮ್ಮನ್ನು ರಕ್ಷಿಸು.
ನಿನ್ನ ಬಲಯುತವಾದ ಸ್ವರವು ಜನರಿಗೆ ಹೆದರಿಕೆಯನ್ನು ಉಂಟುಮಾಡುತ್ತದೆ, ಅವರು ನಿನ್ನಿಂದ ಓಡಿಹೋಗುವರು.
ನಿನ್ನ ಮಹೋನ್ನತೆಯು ಜನಾಂಗಗಳನ್ನು ದಿಕ್ಕಾಪಾಲಾಗಿ ಮಾಡುತ್ತದೆ.”
 
ನೀವು ಯುದ್ಧದಲ್ಲಿ ದೋಚಿಕೊಂಡಿದ್ದೀರಿ. ಅವುಗಳು ನಿಮ್ಮಿಂದ ತೆಗೆಯಲ್ಪಡುವವು. ಅನೇಕಾನೇಕ ಜನರು ಬಂದು ನಿಮ್ಮ ಸಂಪತ್ತನ್ನು ದೋಚಿಕೊಳ್ಳುವರು. ಮಿಡತೆಗಳು ನಿಮ್ಮ ಬೆಳೆಯನ್ನು ತಿಂದು ನಾಶಮಾಡಿದಂತೆ ಅದಿರುವದು.
ಯೆಹೋವನೇ ಉನ್ನತೋನ್ನತನು. ಆತನು ಬಹು ಉನ್ನತವಾದ ಸ್ಥಳದಲ್ಲಿ ವಾಸಿಸುತ್ತಾನೆ. ಆತನು ಚೀಯೋನನ್ನು ನ್ಯಾಯನೀತಿಗಳಿಂದ ತುಂಬಿಸುವನು.
ಜೆರುಸಲೇಮೇ, ನೀನು ಐಶ್ವರ್ಯವಂತಳಾಗಿರುವೆ. ನೀನು ದೇವರ ವಿಷಯವಾದ ಜ್ಞಾನ, ತಿಳುವಳಿಕೆ ಮತ್ತು ರಕ್ಷಣೆಗಳಿಂದ ಐಶ್ವರ್ಯವಂತಳಾಗಿರುವೆ. ಯೆಹೋವನ ಮೇಲೆ ನಿನಗಿರುವ ಗೌರವವೇ ನಿನ್ನ ಭಂಡಾರವಾಗಿದೆ. ನೀನು ಹೀಗೆಯೇ ಮುಂದುವರಿಯುವೆ.
ಆದರೆ ಕಿವಿಗೊಟ್ಟು ಕೇಳಿಸಿಕೊ, ದೂತರು ಹೊರಗೆ ಅಳುತ್ತಿದ್ದಾರೆ. ಸಮಾಧಾನದ ಸಮಾಚಾರವನ್ನು ತರುವವರು ಗಟ್ಟಿಯಾಗಿ ರೋಧಿಸುತ್ತಿದ್ದಾರೆ. ರಸ್ತೆಗಳು ಹಾಳಾಗಿ ಯಾರೂ ಅದರಲ್ಲಿ ನಡಿಯುವದಿಲ್ಲ. ಜನರು ತಾವು ಮಾಡಿದ ಒಪ್ಪಂದವನ್ನು ನಡಿಸುತ್ತಿಲ್ಲ. ಸಾಕ್ಷಿಗಳ ಮಾತುಗಳನ್ನು ಜನರು ಗೌರವಿಸಲು ನಿರಾಕರಿಸುತ್ತಾರೆ. ಜನರು ಒಬ್ಬರನ್ನೊಬ್ಬರು ನಂಬುವದಿಲ್ಲ. ದೇಶವು ಅಸ್ವಸ್ಥತೆಯಿಂದ ಸಾಯುತ್ತಿದೆ. ಲೆಬನೋನ್ ನಾಚಿಗೊಂಡು ಒಣಗುತ್ತಿದೆ. ಶಾರೋನ್ ತಗ್ಗು ಒಣಗಿ ನಿರ್ಜನವಾಗಿದೆ. ಬಾಷಾನ್ ಮತ್ತು ಕರ್ಮೆಲ್ ಹಿಂದೆ ಬಹು ಅಂದವಾದ ಸಸಿಗಳನ್ನು ಬೆಳೆಯಿಸುತ್ತಿದ್ದವು. ಈಗ ಅವುಗಳು ಅಲ್ಲಿ ಬೆಳೆಯುವದಿಲ್ಲ.
10 ಯೆಹೋವನು ಹೀಗೆನ್ನುತ್ತಾನೆ, “ಈಗ ನಾನು ಎದ್ದುನಿಂತು ನನ್ನ ಮಹತ್ವವನ್ನು ತೋರಿಸುವೆನು. ಈಗ ನಾನು ಜನರಿಗೆ ಉನ್ನತೋನ್ನತನಾಗುವೆನು. 11 ಜನರೇ, ನೀವು ಪ್ರಯೋಜನವಿಲ್ಲದ ಕಾರ್ಯಗಳನ್ನು ಮಾಡಿದಿರಿ. ಆ ಕೆಲಸಗಳು ಒಣಹುಲ್ಲಿನಂತೆಯೂ ದಂಟಿನಂತೆಯೂ ಇವೆ. ನಿಮ್ಮ ಆತ್ಮವು ನಿಮ್ಮಲ್ಲಿ ಬೆಂಕಿಯಂತಿದ್ದು ನಿಮ್ಮನ್ನು ಸುಡುವದು. 12 ಎಲುಬುಗಳು ಬೂದಿಯಾಗುವ ತನಕ ಜನರು ಸುಡಲ್ಪಡುವರು. ಅವರು ಮುಳ್ಳುಗಳಂತೆಯೂ ಒಣಪೊದೆಗಳಂತೆಯೂ ಬೇಗನೆ ಸುಟ್ಟುಹೋಗುವರು.
13 “ದೂರದೇಶದಲ್ಲಿರುವವರೇ, ನಾನು ಮಾಡಿದ ಕಾರ್ಯಗಳ ವಿಷಯವಾಗಿ ಕೇಳಿರಿ. ನನ್ನ ಹತ್ತಿರವಿರುವವರೇ, ನನ್ನ ಸಾಮರ್ಥ್ಯದ ವಿಷಯವಾಗಿ ಕಲಿತುಕೊಳ್ಳಿರಿ.”
14 ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಕೆಟ್ಟಕಾರ್ಯಗಳನ್ನು ಮಾಡುವವರು ಹೆದರಿಕೆಯಿಂದ ನಡುಗುವರು. ಜನರು, “ನಮ್ಮಲ್ಲಿ ಯಾರು ನಾಶಮಾಡುವ ಈ ಬೆಂಕಿಯ ಜೊತೆ ಜೀವಿಸಬಲ್ಲರು? ನಿತ್ಯಕಾಲಕ್ಕೂ ಸುಡುವ ಈ ಬೆಂಕಿಯ ಬಳಿಯಲ್ಲಿ ಯಾರು ವಾಸಮಾಡಬಲ್ಲರು?” ಎಂದು ಹೇಳುವರು.
15 ಪ್ರಾಮಾಣಿಕರಾಗಿರುವ ನೀತಿವಂತರು ಹಣಕ್ಕಾಗಿ ಇತರರಿಗೆ ಹಾನಿಮಾಡದವರಾಗಿದ್ದಾರೆ. ಅವರು ಆ ಬೆಂಕಿಯಲ್ಲಿ ವಾಸಿಸುವರು. ಅವರು ಲಂಚ ತೆಗೆದುಕೊಳ್ಳಲು ನಿರಾಕರಿಸುವರು. ಇತರರನ್ನು ಕೊಲೆಮಾಡುವ ಯೋಜನೆಯನ್ನು ಕೇಳಲು ಅವರು ಇಷ್ಟಪಡುವುದಿಲ್ಲ. ಅವರು ಕೆಟ್ಟಕಾರ್ಯಗಳ ಯೋಜನೆಗಳನ್ನು ನೋಡುವುದಿಲ್ಲ. 16 ಅಂಥವರು ಉನ್ನತವಾದ ಸ್ಥಳದಲ್ಲಿ ಸುರಕ್ಷಿತವಾಗಿ ವಾಸಿಸುವರು. ಎತ್ತರವಾದ ಬಂಡೆಕಲ್ಲಿನ ಕೋಟೆಯೊಳಗೆ ಅವರು ಕಾಪಾಡಲ್ಪಡುವರು. ಅವರ ಬಳಿ ಆಹಾರ ಮತ್ತು ನೀರು ಯಾವಾಗಲೂ ಇರುವದು.
17 ನಿಮ್ಮ ಕಣ್ಣುಗಳು ಸೌಂದರ್ಯ ಪ್ರಭಾವಗಳಿಂದ ತುಂಬಿದ ರಾಜನನ್ನು (ದೇವರನ್ನು) ನೋಡುವವು. ನೀವು ಮಹಾ ದೊಡ್ಡ ದೇಶವನ್ನು ನೋಡುವಿರಿ. 18-19 ಹಿಂದಿನ ಕಾಲದಲ್ಲಿ ನೀವು ಅನುಭವಿಸಿದ ಸಂಕಟಗಳನ್ನು ನೆನಪುಮಾಡಿಕೊಳ್ಳುವಿರಿ. ನೀವು ಹೀಗೆ ಭಾವಿಸಿಕೊಳ್ಳುವಿರಿ: “ಬೇರೆ ದೇಶಗಳಿಂದ ಬಂದ ಜನರೆಲ್ಲಿದ್ದಾರೆ? ನಮಗೆ ಅರ್ಥವಾಗದಂಥ ಭಾಷೆಯಲ್ಲಿ ಅವರು ಮಾತಾಡುತ್ತಿದ್ದರು. ಪರದೇಶದ ಅಧಿಕಾರಿಗಳು, ತೆರಿಗೆ ಎತ್ತುವವರು ಎಲ್ಲಿ? ನಮ್ಮ ಕೋಟೆಗಳನ್ನು, ಬುರುಜುಗಳನ್ನು ಲೆಕ್ಕಿಸಲು ಬಂದ ಗೂಢಚಾರರೆಲ್ಲಿ? ಅವರೆಲ್ಲಾ ಹೋಗಿಬಿಟ್ಟರು. ನೀವೆಂದೂ ಆ ಜನರನ್ನು ಕಾಣದೆ ಇರುವಿರಿ.”
ದೇವರು ಜೆರುಸಲೇಮನ್ನು ರಕ್ಷಿಸುತ್ತಾನೆ
20 ನಮ್ಮ ಹಬ್ಬಗಳನ್ನು ಆಚರಿಸುವ ನಗರವಾದ ಚೀಯೋನನ್ನು ನೋಡಿರಿ. ಮನೋಹರವಾದ ವಿಶ್ರಾಂತಿ ಸ್ಥಳವಾದ ಜೆರುಸಲೇಮನ್ನು ನೋಡಿರಿ. ಜೆರುಸಲೇಮು ಎಂದಿಗೂ ಕದಲದ ಗುಡಾರವಾಗಿದೆ. ಆಕೆಯನ್ನು ಭದ್ರವಾಗಿ ಹಿಡಿದುಕೊಂಡಿರುವ ಗೂಟಗಳು ಎಂದಿಗೂ ಕೀಳಲ್ಪಡುವದಿಲ್ಲ. ಆಕೆಯ ಹಗ್ಗಗಳು ಎಂದಿಗೂ ತುಂಡಾಗುವದಿಲ್ಲ. 21-23 ಕೆಂದರೆ ಬಲಿಷ್ಠನಾದ ಯೆಹೋವನು ಅಲ್ಲಿದ್ದಾನೆ. ಆ ದೇಶವು ತೊರೆಗಳೂ ಅಗಲವಾಗಿ ಹರಿಯುವ ನದಿಗಳೂ ಇರುವ ದೇಶವಾಗಿದೆ. ಆದರೆ ಆ ನದಿಯಲ್ಲಿ ವೈರಿಯ ದೋಣಿಯಾಗಲಿ, ಹಡಗುಗಳಾಗಲಿ ಇರುವದಿಲ್ಲ. ಆ ಹಡುಗುಗಳಲ್ಲಿ ಕೆಲಸಮಾಡುವವರೇ, ನೀವು ಅದರ ಹಗ್ಗಗಳಲ್ಲಿ ಕೆಲಸಮಾಡುವದನ್ನು ಬಿಟ್ಟುಬಿಡಿರಿ. ಹಡಗಿನ ಸ್ತಂಭವನ್ನು ನೀವು ಬಲಪಡಿಸಲಾರಿರಿ. ಹಡಗಿನ ಹಾಯಿಗಳನ್ನು ನಿಮ್ಮಿಂದ ತೆರೆಯಲು ಆಗುವದಿಲ್ಲ. ಯಾಕೆಂದರೆ ದೇವರೇ ನಮ್ಮ ನ್ಯಾಯಾಧೀಶನು. ಆತನು ಧರ್ಮಶಾಸ್ತ್ರವನ್ನು ಸಿದ್ಧಪಡಿಸಿದಾತನು. ಯೆಹೋವನೇ ನಮ್ಮ ಅರಸನು. ಆತನೇ ನಮ್ಮನ್ನು ರಕ್ಷಿಸುವನು, ನಮಗೆ ಸಂಪತ್ತನ್ನು ದಯಪಾಲಿಸುವನು. ಕೈಕಾಲು ಊನವಾದವರೂ ಸಹ ಯುದ್ಧದಲ್ಲಿ ಸಂಪತ್ತನ್ನು ಗಳಿಸುವರು. 24 ಅಲ್ಲಿ ವಾಸಿಸುವವರಲ್ಲಿ ಯಾರೂ “ನನಗೆ ಸೌಖ್ಯವಿಲ್ಲ” ಎಂದು ಹೇಳುವುದಿಲ್ಲ. ಅಲ್ಲಿ ವಾಸಿಸುವವರೆಲ್ಲಾ ತಮ್ಮ ಪಾಪಗಳಿಗೆ ಕ್ಷಮೆಹೊಂದಿದವರಾಗಿದ್ದಾರೆ.