30
“ಈಗಲಾದರೋ, ನನಗಿಂತ ಚಿಕ್ಕವರೂ ನನ್ನನ್ನು ಗೇಲಿ ಮಾಡುತ್ತಾರೆ.
ಅವರ ತಂದೆಗಳನ್ನು ನನ್ನ ಕುರಿಕಾಯುವ ನಾಯಿಗಳಿಗೂ ಯೋಗ್ಯರಲ್ಲವೆಂದು ತಳ್ಳಿಬಿಟ್ಟಿದ್ದೆನು.
ಆ ಯೌವನಸ್ಥರ ತಂದೆಗಳಿಗೆ ನನ್ನಲ್ಲಿ ಕೆಲಸ ಮಾಡುವಷ್ಟು ಬಲವಿರಲಿಲ್ಲ.
ಅವರು ಮುದುಕರಾಗಿದ್ದರು; ತ್ರಾಣವಿಲ್ಲದವರಾಗಿದ್ದರು.
ಆ ಮನುಷ್ಯರು ಬಡಕಲಾಗಿದ್ದರು; ತಿನ್ನಲಿಕ್ಕಿಲ್ಲದೆ ಹಸಿವೆಯಿಂದಿದ್ದರು;
ಅಡವಿಯ ಒಣಧೂಳನ್ನು ತಿನ್ನುತ್ತಿದ್ದರು.
ಅವರು ಮರುಭೂಮಿಯಲ್ಲಿ ಉಪ್ಪುಸಸಿಗಳನ್ನು ಕೀಳುತ್ತಿದ್ದರು;
ಕುರುಚಲು ಮರದ ಬೇರುಗಳನ್ನು ತಿನ್ನುತ್ತಿದ್ದರು.
ಅವರನ್ನು ಬೇರೆಯವರು ಬಲವಂತದಿಂದ ಹೊರಗಟ್ಟುತ್ತಿದ್ದರು.
ಕಳ್ಳರನ್ನೋ ಎಂಬಂತೆ ಜನರು ಅವರನ್ನು ಕಂಡು ಕೂಗಿಕೊಳ್ಳುತ್ತಿದ್ದರು.
ಆ ಮುದುಕರು ನದಿಯ ದಂಡೆಗಳಲ್ಲಿಯೂ ನೆಲದ ಕುಳಿಗಳಲ್ಲಿಯೂ
ಗುಹೆಗಳಲ್ಲಿಯೂ ವಾಸಿಸುತ್ತಿದ್ದರು.
ಅವರು ಪೊದೆಗಳಲ್ಲಿ ಕಾಡುಕತ್ತೆಗಳಂತೆ ಅರಚುತ್ತಿದ್ದರು;
ಮುಳ್ಳುಗಿಡಗಳ ಕೆಳಗೆ ಕೂಡಿಕೊಳ್ಳುತ್ತಿದ್ದರು.
ಅಯೋಗ್ಯರಾಗಿದ್ದ ಈ ಗುಂಪಿನವರು
ದೇಶಭ್ರಷ್ಟರಾಗಿದ್ದರು.
 
“ಈಗಲಾದರೋ ಅವರ ಗಂಡುಮಕ್ಕಳು ನನ್ನ ಮೇಲೆ ಗೇಲಿ ಹಾಡುಗಳನ್ನು ಕಟ್ಟುವರು;
ನನ್ನ ಹೆಸರು ಅವರಿಗೆ ಹಾಸ್ಯವಾಯಿತು.
10 ಆ ಯೌವನಸ್ಥರು ನನ್ನನ್ನು ಕಂಡು ಅಸಹ್ಯಪಡುತ್ತಾರೆ; ನನ್ನಿಂದ ದೂರ ನಿಲ್ಲುತ್ತಾರೆ.
ನನ್ನ ಮುಖದ ಮೇಲೆ ಉಗುಳುವುದಕ್ಕೂ ಅವರು ಹಿಂದೆಗೆಯರು!
11 ದೇವರು ನನ್ನ ಬಿಲ್ಲಿನ ತಂತಿಯನ್ನು ಕಿತ್ತು ನನ್ನನ್ನು ಬಲಹೀನಗೊಳಿಸಿದ್ದಾನೆ.
ಆ ಯೌವನಸ್ಥರು ಕಡಿವಾಣವಿಲ್ಲದವರಾಗಿ ಕೋಪದಿಂದ ನನಗೆ ವಿರೋಧವಾಗಿ ಎದ್ದಿದ್ದಾರೆ.
12 ಅವರು ನನ್ನ ಬಲಗಡೆಯಲ್ಲಿ ಎದ್ದು ನನ್ನ ಕಾಲುಗಳನ್ನು ಹಿಂದಕ್ಕೆ ನೂಕಿ
ನನ್ನನ್ನು ನಾಶಮಾಡಲು ದಿಬ್ಬಹಾಕಿದ್ದಾರೆ.
13 ನಾನು ತಪ್ಪಿಸಿಕೊಂಡು ಹೋಗುವ ದಾರಿಯನ್ನು ಆ ಯೌವನಸ್ಥರು ಕಾಯುತ್ತಿದ್ದಾರೆ.
ನನ್ನನ್ನು ನಾಶಮಾಡುವುದರಲ್ಲಿ ಅವರು ಯಶಸ್ವಿಯಾಗುವರು.
ಅವರಿಗೆ ವಿರುದ್ಧವಾಗಿ ನನಗೆ ಸಹಾಯಮಾಡಲು ಯಾರೂ ಇಲ್ಲ.
14 ಅವರು ಗೋಡೆಯನ್ನು ಒಡೆದು ನುಗ್ಗಿಬರಲು
ಕಲ್ಲುಗಳು ನನ್ನ ಮೇಲೆ ಬೀಳುವವು.
15 ನಾನು ಭಯದಿಂದ ನಡುಗುತ್ತಿರುವೆ.
ಗಾಳಿಯು ವಸ್ತುಗಳನ್ನು ಕೊಚ್ಚಿಕೊಂಡು ಹೋಗುವಂತೆ ಆ ಯೌವನಸ್ಥರು ನನ್ನ ಮಾನವನ್ನು ಅಟ್ಟಿಬಿಡುವರು.
ನನ್ನ ಸುರಕ್ಷತೆಯು ಮೋಡದಂತೆ ಕಾಣದೆಹೋಗುವುದು.
 
16 “ಈಗ ನನ್ನ ಜೀವಿತವು ಕೊನೆಗೊಂಡಿದೆ; ಸಾವು ಸಮೀಪವಾಗಿದೆ.
ಸಂಕಟದ ದಿನಗಳು ನನ್ನನ್ನು ಹಿಡಿದುಕೊಂಡಿವೆ.
17 ರಾತ್ರಿಯಲ್ಲಿ ನನ್ನ ಎಲುಬುಗಳೆಲ್ಲಾ ನೋಯುತ್ತವೆ.
ನನ್ನನ್ನು ಕಚ್ಚುತ್ತಿರುವ ನೋವು ನಿಲ್ಲುವುದೇ ಇಲ್ಲ.
18 ದೇವರು ನನ್ನ ಮೇಲಂಗಿಯ ಕೊರಳಪಟ್ಟಿಯನ್ನು ಹಿಡಿದು
ನನ್ನ ಬಟ್ಟೆಯನ್ನು ತಿರುವಿಬಿಟ್ಟಿದ್ದಾನೆ.
19 ದೇವರು ನನ್ನನ್ನು ಮಣ್ಣಿಗೆ ಎಸೆದುಬಿಟ್ಟಿದ್ದಾನೆ,
ನಾನು ಧೂಳಿನಂತೆಯೂ ಬೂದಿಯಂತೆಯೂ ಆಗಿದ್ದೇನೆ.
 
20 “ದೇವರೇ, ನಾನು ಸಹಾಯಕ್ಕಾಗಿ ನಿನಗೆ ಮೊರೆಯಿಡುವೆನು, ಆದರೆ ನೀನು ಉತ್ತರಿಸುವುದಿಲ್ಲ.
ನಾನು ಎದ್ದುನಿಂತು ಪ್ರಾರ್ಥಿಸಿದರೂ ನೀನು ನನಗೆ ಗಮನ ಕೊಡುವುದಿಲ್ಲ.
21 ದೇವರೇ, ನೀನು ನನ್ನ ಪಾಲಿಗೆ ಕ್ರೂರನಾಗಿಬಿಟ್ಟೆ.
ನಿನ್ನ ಶಕ್ತಿಯಿಂದ ನನ್ನನ್ನು ನೋಯಿಸುತ್ತಿರುವೆ.
22 ದೇವರೆ, ನನ್ನನ್ನು ಎತ್ತಿಕೊಂಡು ಹೋಗಲು ನೀನು ಬಿರುಗಾಳಿಗೆ ಅವಕಾಶಕೊಟ್ಟೆ;
ನೀನು ನನ್ನನ್ನು ಎತ್ತಿ ಬಿರುಗಾಳಿಗೆ ಎಸೆದುಬಿಟ್ಟೆ.
23 ನೀನು ನನ್ನನ್ನು ಮರಣಕ್ಕೀಡು ಮಾಡಿರುವುದು ನನಗೆ ಗೊತ್ತಿದೆ.
ಜೀವಿಸಿರುವ ಪ್ರತಿಯೊಬ್ಬನೂ ಸಾಯಲೇಬೇಕು.
 
24 “ಆದರೆ ಈಗಾಗಲೇ ನಾಶವಾಗಿ ಸಹಾಯಕ್ಕಾಗಿ ಕೂಗಿಕೊಳ್ಳುವವನಿಗೆ
ಯಾರೂ ಕೇಡುಮಾಡುವುದಿಲ್ಲ.
25 ದೇವರೇ, ಕಷ್ಟದಲ್ಲಿರುವವರಿಗಾಗಿ ನಾನು ಅತ್ತದ್ದು ನಿನಗೆ ಗೊತ್ತಿದೆ.
ಬಡವರಿಗೋಸ್ಕರ ನನ್ನ ಹೃದಯವು ಬಹು ದುಃಖಗೊಂಡದ್ದು ನಿನಗೆ ತಿಳಿದಿದೆ.
26 ಆದರೆ ನಾನು ಒಳ್ಳೆಯವುಗಳನ್ನು ನಿರೀಕ್ಷಿಸುತ್ತಿದ್ದಾಗ ನನಗೆ ಕೇಡುಗಳೇ ಆದವು.
ನಾನು ಬೆಳಕಿಗಾಗಿ ಎದುರುನೋಡುತ್ತಿದ್ದಾಗ ನನಗೆ ಕತ್ತಲಾಯಿತು.
27 ನನ್ನ ಅಂತರಂಗವು ಕುದಿಯುತ್ತಿದೆ; ಸಂಕಟವು ನಿಲ್ಲುತ್ತಲೇ ಇಲ್ಲ.
ಸಂಕಟವು ಈಗ ತಾನೆ ಆರಂಭಗೊಂಡಿದೆ.
28 ನಾನು ದುಃಖಿತನೂ ಕುಂದಿಹೋದವನೂ ಆಗಿರುವೆ; ನನಗೆ ಉಪಶಮನವೇ ಇಲ್ಲ.
ನಾನು ಸಭೆಯಲ್ಲಿ ನಿಂತುಕೊಂಡು ಸಹಾಯಕ್ಕಾಗಿ ಕೂಗುತ್ತಿರುವೆ.
29 ನಾನು ನರಿಗಳಂತೆಯೂ ಉಷ್ಟ್ರಪಕ್ಷಿಗಳಂತೆಯೂ
ಒಬ್ಬಂಟಿಗನಾಗಿರುವೆ.
30 ನನ್ನ ಚರ್ಮವು ಕಡುಕಪ್ಪಾಗಿದೆ.
ನನ್ನ ದೇಹವು ಜ್ವರದಿಂದ ಬಿಸಿಯಾಗಿದೆ.
31 ಶೋಕಗೀತೆಗಳನ್ನು ನುಡಿಸಲು ನನ್ನ ಹಾರ್ಪ್ ವಾದ್ಯವನ್ನು ಶೃತಿ ಮಾಡಲಾಗಿದೆ.
ನನ್ನ ಕೊಳಲು ಅಳುವವರಿಗೆ ತಕ್ಕಂತೆ ನುಡಿಯುತ್ತದೆ.