31
“ಯುವತಿಯನ್ನು ಕಾಮದಾಶೆಯಿಂದ ನೋಡುವುದಿಲ್ಲವೆಂದು
ನನ್ನ ಕಣ್ಣುಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ.
ಸರ್ವಶಕ್ತನಾದ ದೇವರು ಜನರಿಗೆ ಏನು ಮಾಡುವನು?
ದೇವರು ತನ್ನ ಉನ್ನತವಾದ ಪರಲೋಕದಿಂದ ಜನರಿಗೆ ಹೇಗೆ ಪ್ರತಿಫಲವನ್ನು ಕೊಡುವನು?
ಆತನು ದುಷ್ಟರಿಗೆ ತೊಂದರೆಯನ್ನೂ ನಾಶನವನ್ನೂ
ತಪ್ಪಿತಸ್ಥರಿಗೆ ವಿಪತ್ತನ್ನೂ ಕಳುಹಿಸುವನು.
ನಾನು ಮಾಡುವ ಪ್ರತಿಯೊಂದು ದೇವರಿಗೆ ಗೊತ್ತು
ಮತ್ತು ನಾನಿಡುವ ಪ್ರತಿಯೊಂದು ಹೆಜ್ಜೆಯನ್ನೂ ಆತನು ಗಮನಿಸುವನು.
 
“ನಾನು ಸುಳ್ಳು ಹೇಳಲಿಲ್ಲ;
ಜನರಿಗೆ ಮೋಸಮಾಡಲು ಪ್ರಯತ್ನಿಸಲೂ ಇಲ್ಲ.
ದೇವರು ನ್ಯಾಯವಾದ ಅಳತೆಮಾನಗಳಿಂದ ನನ್ನನ್ನು ತೂಗಿದರೆ,
ನಾನು ನಿರಪರಾಧಿಯೆಂದು ಆತನಿಗೆ ಗೊತ್ತಾಗುವುದು.
ನಾನು ನೀತಿಮಾರ್ಗವನ್ನು ಬಿಟ್ಟುಹೋಗಿದ್ದರೆ,
ನನ್ನ ಕಣ್ಣುಗಳು ನನ್ನ ಹೃದಯವನ್ನು ಕೆಟ್ಟದ್ದಕ್ಕೆ ನಡೆಸಿದ್ದರೆ,
ನನ್ನ ಕೈಗಳು ಪಾಪದಿಂದ ಕೊಳಕಾಗಿದ್ದರೆ,
ನಾನು ಬಿತ್ತಿ ಬೆಳೆಸಿದ ಬೆಳೆಗಳನ್ನು ಬೇರೆಯವರು ತಿನ್ನಲಿ;
ನಾನು ಬೆಳೆಸಿದ ಸಸಿಗಳು ಕೀಳಲ್ಪಡಲಿ.
 
“ಒಂದುವೇಳೆ ನಾನು ಪರಸ್ತ್ರೀಯಲ್ಲಿ ಮರುಳುಗೊಂಡಿದ್ದರೆ,
ನನ್ನ ನೆರೆಯವನ ಹೆಂಡತಿಯೊಂದಿಗೆ ವ್ಯಭಿಚಾರ ಮಾಡಲು ಅವನ ಮನೆಯ ಬಾಗಿಲಲ್ಲಿ ಕಾದುಕೊಂಡಿದ್ದರೆ,
10 ನನ್ನ ಹೆಂಡತಿಯು ಬೇರೊಬ್ಬನಿಗೆ ಸೇವಕಿಯಾಗಲಿ;
ಬೇರೆಯವರು ಆಕೆಯೊಂದಿಗೆ ಮಲಗಿಕೊಳ್ಳಲಿ.
11 ಯಾಕೆಂದರೆ ವ್ಯಭಿಚಾರ ಅವಮಾನಕರ.
ಆ ಪಾಪಕ್ಕೆ ದಂಡನೆಯಾಗಲೇಬೇಕು.
12 ವ್ಯಭಿಚಾರವು ಸುಟ್ಟು ನಾಶಮಾಡುವ ಬೆಂಕಿಯಂತಿದೆ.
ನಾನು ಹೊಂದಿರುವ ಪ್ರತಿಯೊಂದನ್ನು ಅದು ನಾಶಮಾಡಿಬಿಡುತ್ತಿತ್ತು.
 
13 “ನನ್ನ ಸೇವಕಸೇವಕಿಯರು ನನಗೆ ವಿರೋಧವಾಗಿ ದೂರನ್ನು ಹೊಂದಿದ್ದಾಗ
ನಾನು ಅವರಿಗೆ ನ್ಯಾಯವನ್ನು ದೊರಕಿಸಿಲ್ಲದಿದ್ದರೆ
14 ದೇವರು ನನ್ನನ್ನು ಮುಖಾಮುಖಿಯಾಗಿ ಸಂಧಿಸುವಾಗ ನಾನೇನು ಮಾಡಲಿ?
ನಾನು ಮಾಡಿದ್ದಕ್ಕೆ ವಿವರಣೆ ಕೊಡುವಂತೆ ದೇವರು ನನ್ನನ್ನು ಕರೆಯುವಾಗ ನಾನೇನು ಉತ್ತರ ಕೊಡಲಿ?
15 ದೇವರು ನನ್ನನ್ನು ನನ್ನ ತಾಯಿಯ ಗರ್ಭದಲ್ಲಿ ನಿರ್ಮಿಸಿದನು.
ದೇವರು ನನ್ನ ಸೇವಕಸೇವಕಿಯರನ್ನೂ ನಿರ್ಮಿಸಿದನು.
ದೇವರು ನಮ್ಮೆಲ್ಲರನ್ನು ನಮ್ಮ ತಾಯಂದಿರ ಗರ್ಭಗಳಲ್ಲಿ ರೂಪಿಸಿದನು.
 
16 “ಬಡಜನರಿಗೆ ಸಹಾಯಮಾಡಲು ನಾನೆಂದೂ ನಿರಾಕರಿಸಲಿಲ್ಲ;
ವಿಧವೆಯರಿಗೆ ಬೇಕಾದದ್ದನ್ನೆಲ್ಲ ನಾನು ಒದಗಿಸಿಕೊಟ್ಟೆನು.
17 ನಾನು ಸ್ವಾರ್ಥದಿಂದ ನನ್ನ ಆಹಾರವನ್ನು ಎಂದೂ ಇಟ್ಟುಕೊಳ್ಳಲಿಲ್ಲ.
ಅನಾಥರು ಹಸಿವೆಯಿಂದಿರಲು ನಾನೆಂದೂ ಅವಕಾಶ ಕೊಟ್ಟಿಲ್ಲ.
18 ನಾನು ನನ್ನ ಜೀವಮಾನವೆಲ್ಲಾ, ಅನಾಥರಿಗೆ ತಂದೆಯಂತಿದ್ದೆನು;
ವಿಧವೆಯರನ್ನು ಪರಿಪಾಲಿಸಿದೆನು.
19 ಬಟ್ಟೆಯಿಲ್ಲದೆ ಸಂಕಟಪಡುತ್ತಿರುವವರನ್ನೂ
ಮೇಲಂಗಿಯಿಲ್ಲದ ಬಡವರನ್ನೂ ನಾನು ಕಂಡಾಗಲೆಲ್ಲಾ
20 ಅವರಿಗೆ ಬಟ್ಟೆಗಳನ್ನು ಕೊಟ್ಟೆನು.
ನನ್ನ ಕುರಿಗಳ ಉಣ್ಣೆಯಿಂದ ಅವರ ಮೈಯನ್ನು ಬೆಚ್ಚಗೆ ಮಾಡಿದೆನು.
ಅವರು ನನ್ನನ್ನು ಪೂರ್ಣಹೃದಯದಿಂದ ಆಶೀರ್ವದಿಸಿದರು.
21 ನನಗೆ ನ್ಯಾಯಸ್ಥಾನದಲ್ಲಿ ಬೆಂಬಲವಿದ್ದರೂ
ಅನಾಥರನ್ನು ಕಂಡು ನಾನೆಂದೂ ಅವರ ಮೇಲೆ ಕೈ ಮಾಡಲಿಲ್ಲ.
22 ನಾನು ಹಾಗೆ ಮಾಡಿದ್ದರೆ,
ನನ್ನ ತೋಳು ಕೀಲುತಪ್ಪಿ ಭುಜದಿಂದ ಮುರಿದುಬೀಳಲಿ.
23 ನಾನು ಆ ಕೆಟ್ಟಕಾರ್ಯಗಳಲ್ಲಿ ಯಾವುದನ್ನೂ ಮಾಡಲಿಲ್ಲ.
ಯಾಕೆಂದರೆ ನಾನು ದೇವರ ಶಿಕ್ಷೆಗೆ ಹೆದರಿಕೊಂಡಿದ್ದೆ.
ಆತನ ವೈಭವದ ಎದುರಿನಲ್ಲಿ ನಿಂತುಕೊಳ್ಳಲು ನನಗಾಗಲಿಲ್ಲ.
 
24 “ನಾನು ನನ್ನ ಐಶ್ವರ್ಯಗಳಲ್ಲಿ ಎಂದೂ ಭರವಸವಿಡಲಿಲ್ಲ.
ನಾನು ಬಂಗಾರಕ್ಕೆ ‘ನೀನೇ ನನ್ನ ನಿರೀಕ್ಷೆ’ ಎಂದು ಹೇಳಲೇ ಇಲ್ಲ.
25 ನನ್ನ ಐಶ್ವರ್ಯದಿಂದಲೂ ನಾನು ಗರ್ವಿಷ್ಠನಾಗಲಿಲ್ಲ.
ನಾನು ಗಳಿಸಿದ ಅಪಾರ ಹಣವೂ ನನ್ನನ್ನು ಉಲ್ಲಾಸಪಡಿಸಲಿಲ್ಲ.
26 ಪ್ರಕಾಶಮಾನವಾದ ಸೂರ್ಯನನ್ನಾಗಲಿ
ಸುಂದರವಾದ ಚಂದ್ರನನ್ನಾಗಲಿ ನಾನೆಂದೂ ಪೂಜಿಸಲಿಲ್ಲ.
27 ನಾನು ಮರುಳುಗೊಂಡು
ನನ್ನ ಕೈಗೆ ಮುದ್ದಿಡುವುದರ ಮೂಲಕ ಸೂರ್ಯಚಂದ್ರರನ್ನು ಪೂಜಿಸಲಿಲ್ಲ.
28 ನಾನು ಅವುಗಳಲ್ಲಿ ಯಾವುದನ್ನೇ ಮಾಡಿದ್ದರೂ ನನಗೆ ಶಿಕ್ಷೆಯಾಗುತ್ತಿತ್ತು.
ಯಾಕೆಂದರೆ ಆಗ ನಾನು ಸರ್ವಶಕ್ತನಾದ ದೇವರಿಗೆ ಅಪನಂಬಿಗಸ್ತನಾಗುತ್ತಿದ್ದೆನು.
 
29 “ನನ್ನ ವೈರಿಗಳು ನಾಶವಾದಾಗ
ನಾನೆಂದೂ ಸಂತೋಷಪಡಲಿಲ್ಲ.
ನನ್ನ ವೈರಿಗಳಿಗೆ ಕೇಡಾದಾಗ
ನಾನೆಂದೂ ನಗಲಿಲ್ಲ.
30 ನನ್ನ ವೈರಿಗಳನ್ನು ಶಪಿಸಿ, ಅವರಿಗೆ ಸಾವನ್ನು ಕೋರಲು
ನಾನೆಂದೂ ನನ್ನ ಬಾಯಿಗೆ ಅವಕಾಶ ಕೊಡಲಿಲ್ಲ.
31 ನಾನು ಅಪರಿಚಿತರಿಗೆ ಯಾವಾಗಲೂ ಊಟ ಕೊಟ್ಟದ್ದು
ನನ್ನ ಮನೆಯಲ್ಲಿರುವ ಎಲ್ಲರಿಗೂ ಗೊತ್ತಿದೆ.
32 ನಾನು ಅಪರಿಚಿತರನ್ನು ನನ್ನ ಮನೆಗೆ ಯಾವಾಗಲೂ ಆಹ್ವಾನಿಸುತ್ತಿದ್ದೆನು.
ಆದ್ದರಿಂದ ರಾತ್ರಿಯಲ್ಲಿ ಅವರು ಬೀದಿಗಳಲ್ಲಿ ಮಲಗಿಕೊಳ್ಳಬೇಕಾಗಿರಲಿಲ್ಲ.
33 ಬೇರೆಯವರು ತಮ್ಮ ಪಾಪಗಳನ್ನು ಮರೆಮಾಡಲು ಪ್ರಯತ್ನಿಸಬಹುದು.
ಆದರೆ ನಾನು ನನ್ನ ಯಾವ ಪಾಪವನ್ನೂ ಮರೆಮಾಡಲಿಲ್ಲ.
34 ಜನರ ಮಾತಿಗೆ ನಾನೆಂದೂ ಭಯಗೊಂಡಿರಲಿಲ್ಲ; ಯಾವ ಕುಟುಂಬದ ಅಸಮ್ಮತಿಗೂ ನಾನೆಂದೂ ಹೆದರಿಕೊಂಡಿರಲಿಲ್ಲ; ಅಂಥ ಯಾವ ಭಯವೂ ನನ್ನನ್ನು ಮೌನಗೊಳಿಸಿ ಮನೆಯೊಳಗಿರಿಸಲಿಲ್ಲ.
ಯಾಕೆಂದರೆ ನನ್ನ ಮೇಲೆ ಜನರಿಗಿರುವ ದ್ವೇಷಕ್ಕೆ ನಾನು ಹೆದರಿಕೊಂಡಿರಲಿಲ್ಲ.
 
35 “ಅಯ್ಯೋ, ನನಗೆ ಕಿವಿಗೊಡುವುದಕ್ಕೆ ಯಾರಾದರೊಬ್ಬರು ಇರಬೇಕಿತ್ತು!
ನಾನು ಸತ್ಯವನ್ನೇ ಹೇಳಿದೆನೆಂಬುದಕ್ಕೆ ಇದೋ, ಇಲ್ಲಿದೆ ನನ್ನ ಸಹಿ!
ಸರ್ವಶಕ್ತನಾದ ದೇವರು ನನಗೆ ಉತ್ತರಕೊಡಲಿ.
ನನ್ನ ಮೇಲೆ ಅಪವಾದ ಹೊರಿಸುವವನು, ಆಪಾದನೆಯ ಪತ್ರವನ್ನು ಕೊಡಲಿ!
36 ಖಂಡಿತವಾಗಿಯೂ ನಾನು ಆ ಪತ್ರವನ್ನು ನನ್ನ ಹೆಗಲ ಮೇಲೆ ಇಟ್ಟುಕೊಳ್ಳುವೆನು.
ಅದನ್ನು ಕಿರೀಟವನ್ನಾಗಿ ಧರಿಸಿಕೊಳ್ಳುವೆನು.
37 ನಾನು ಮಾಡಿರುವ ಪ್ರತಿಯೊಂದನ್ನು ದೇವರಿಗೆ ವಿವರಿಸುವೆನು.
ನಾನು ಅಧಿಪತಿಯಂತೆ ತಲೆಯೆತ್ತಿಕೊಂಡು ಆತನ ಸಮೀಪಕ್ಕೆ ಬರುವೆನು.
 
38 “ನನ್ನ ಹೊಲವನ್ನು ಬೇರೆಯವರಿಂದ ಕಿತ್ತುಕೊಳ್ಳಲಿಲ್ಲ;
ಈ ವಿಷಯದಲ್ಲಿ ಯಾರೂ ನನ್ನ ಮೇಲೆ ಅಪವಾದ ಹೊರಿಸಲಾರರು.
39 ನಾನು ರೈತರಿಗೆ ಬೆಳೆಯಲ್ಲಿ ಪಾಲು ಕೊಟ್ಟೆನು;
ಯಾರೂ ಹಸಿವೆಯಿಂದ ಇರಲು ಬಿಡಲಿಲ್ಲ.
40 ಇವುಗಳಲ್ಲಿ ನಾನು ಯಾವುದನ್ನಾದರೂ ಮಾಡಿದ್ದರೆ,
ಗೋಧಿ ಮತ್ತು ಬಾರ್ಲಿಗಳ ಬದಲಾಗಿ ನನ್ನ ಹೊಲಗಳಲ್ಲಿ ಮುಳ್ಳುಗಳೂ ಕಳೆಗಳೂ ಬೆಳೆಯಲಿ.”
 
ಹೀಗೆ ಯೋಬನ ಮಾತುಗಳು ಮುಗಿದವು.